ನಾಯಕತ್ವ ಬದಲಾವಣೆ ವಿಚಾರವನ್ನು ರಾಹುಲ್ ಗಾಂಧಿ ತೀರ್ಮಾನಿಸುತ್ತಾರೆ. ರಾಹುಲ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಇದೇ ವೇಳೆ ಡಿಸಿಎಂ ಡಿ ಕೆ ಶಿವಕುಮಾರ್ ಇಂದು ದಿಲ್ಲಿ ಭೇಟಿಗೆ ತೆರಳಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಚೆಂಡು ರಾಹುಲ್ ಗಾಂಧಿ ಅಂಗಳಲ್ಲಿದೆ. ನಾಯಕತ್ವದ ಬದಲಾವಣೆ ವಿಚಾರದಲ್ಲಿ ರಾಹುಲ್ ನಿರ್ಧಾರಕ್ಕೆ ತಾವೆಲ್ಲರೂ ಬದ್ಧ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಪುನರ್ ಉಚ್ಚರಿಸಿದ್ದಾರೆ. ನಾಯಕತ್ವ ಗೊಂದಲಕ್ಕೆ ಸ್ಥಳೀಯ ಮಟ್ಟದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದರು. ಸಮಸ್ಯೆ ಬಗೆಹರಿಯದೇ ಇದ್ದಾಗ ಅದನ್ನು ರಾಹುಲ್ ಹೆಗಲಿಗೆ ಹಾಕಿದ್ದಾರೆ. ಈ ವೇಳೆ ಹೈಕಮಾಂಡ್ ಈ ವಿಚಾರದಲ್ಲಿ ಬ್ರೇಕ್ ಫಾಸ್ಟ್, ಡಿನ್ನರ್ ಮೀಟಿಂಗ್ ಗೆ ಸೂಚಿಸುವ ಮೂಲಕ ವಿಳಂಬ ನೀತಿ ಅನುಸರಿಸಿದ್ರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ.
ಡಿಸೆಂಬರ್ 27 ರಂದು ನವದೆಹಲಿಯಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಮೀಟಿಂಗ್ ನಡೆಯಲಿದೆ. ಸಭೆಯಲ್ಲಿಕಾಂಗ್ರೆಸ್ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಸೇರಿದಂತೆ ಸಿಡಬ್ಲ್ಯೂಸಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಅದ್ರೆ, ಕರ್ನಾಟಕದ ಸಿಎಂ ಹಾಗೂ ಡಿಸಿಎಂಗೆ ಅಹ್ವಾನಿಸುವ ಸಾಧ್ಯತೆ ವಿರಳವಾಗಿದೆ. ಏಕೆಂದ್ರೆ, ಸಿಡಬ್ಲ್ಯೂಸಿ ಸಭೆಗೆ ಇವರಿಬ್ಬರನ್ನು ಆಹ್ವಾನಿಸಿದ್ರೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹಿಂದಿನ ಸಿಡ್ಲ್ಯೂಸಿ ಸಭೆಯಲ್ಲಿ ಇವರಿಬ್ಬರು ಪಾಲ್ಗೊಂಡಿದ್ದರು. ಅದ್ರೆ, ಡಿ.27 ರಂದು ನಡೆಯಲಿರುವ ಸಭೆಗೆ ಇವರಿಬ್ಬರಿಗೂ ಅಹ್ವಾನಿ ನೀಡೋದು ಅನುಮಾನವಾಗಿದೆ. ಇಂತಹ ಸನ್ನಿವೇಶದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ. ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ನೇತೃತ್ವದಲ್ಲಿ ಎಲ್ಲಾ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಭೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂಬಂಧ ಡಿಕೆ ಶಿವಕುಮಾರ್ ನವದೆಹಲಿಗೆ ತೆರಳುತ್ತಿದ್ದಾರೆ. ಕೇಂದ್ರ ಸಚಿವರೊಂದಿಗೆ ಸಭೆ ನಡೆದ ಬಳಿಕ ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ಭೇಟಿ ಸೇರಿದಂತೆ ಕಾಂಗ್ರೆಸ್ ವರಿಷ್ಠರ ಭೇಟಿಗೂ ಯತ್ನಿಸುವ ಸಾಧ್ಯತೆ ಇದೆ.
ಇತ್ತ ರಾಜ್ಯದಲ್ಲಿ ಸಿಎಂ ಅಪ್ತರನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಮಾಡುವ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದಾರೆ. ಒಟ್ಟಾರೆ, ರಾಜ್ಯ ರಾಜಕೀಯದ ಚೆಂಡು ದೆಹಲಿ ಅಂಗಳದಲ್ಲಿದ್ದು, ವರಿಷ್ಠರ ನಿರ್ಧಾರದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.
